ಚೈತನ್ಯ ನ್ಯೂಸ್ 24 ಚಿತ್ರದುರ್ಗಮೇ 11.
ರಾಜ್ಯದ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕಷ್ಟದ ಜೀವನದಲ್ಲಿ ಬೆಳೆದು ಬದುಕು ಕಟ್ಟಿಕೊಂಡವರು. ಶಿಕಾರಿಪುರ ಪುರಸಭೆಯ ಸದಸ್ಯರಾಗಿ ರಾಜಕೀಯ ಜೀವನ ಪ್ರಾರಂಭಿಸಿದ ಅವರು ಶಾಸಕರಾಗಿ ವಿರೋಧ ಪಕ್ಷದ ನಾಯಕರಾಗಿ ಮುಖ್ಯ ಮಂತ್ರಿ ಸ್ಥಾನದ ವರೆಗಿನ ಅವರ ರಾಜಕೀಯ ಪ್ರಯಾಣ ಸಣ್ಣದಲ್ಲ. ಸೈಕಲ್ ತುಳಿಯುವ ಮೂಲಕ ರಾಜ್ಯ ಸುತ್ತಿ ಹೋರಾಟ,ಬದ್ಧತೆ, ದೂರದರ್ಶಿತ್ವ, ಗಟ್ಟಿತನದಿಂದ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅವರ ಸೇವೆಯನ್ನು ಪಕ್ಷ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ನಗರದಲ್ಲಿ ಜರುಗಿದ ಬಿ.ಎಸ್.ಯಡಿಯೂರಪ್ಪನವರ ಅಭಿಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡುತ್ತಿದ್ದರು. ಎಲ್ಲ ಜಾತಿ ಜನಾಂಗಗಳ ಧಾರ್ಮಿಕ ಕೇಂದ್ರಗಳಿಗೆ ಬಜೆಟ್ಟಿನಲ್ಲಿ ಅನುದಾನ ಘೋಷಿಸಿದ ಮೊದಲ ಮುಖ್ಯ ಮಂತ್ರಿ ಅವರಾಗಿದ್ದಾರೆ. ಅವರು ರಾಜ್ಯದ ಮುಖ್ಯ ಮಂತ್ರಿಯಾಗಿ ಹತ್ತು ಹಲವು ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದನ್ನು ಮರೆಯುವಂತಿಲ್ಲ ಎಂದರು. ಸಮಾರಂಭದಲ್ಲಿ ಶ್ರೀ ಶ್ರೀಶೈಲ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು, ಕಾಶೀ ಪೀಠದ ಡಾ.ಚಂದ್ರಶೇಖರ ಜಗದ್ಗುರುಗಳು ಸೇರಿದಂತೆ ನಾಡಿನ ಪ್ರಮುಖ ಮಠಗಳ ಮಠಾಧೀಶರು ಉಪಸ್ಥಿತರಿದ್ದರು.