ಚೈತನ್ಯ ನ್ಯೂಸ್ 24 ಚಿಕ್ಕಮಗಳೂರು ಮೇ.27:
ಜನಮನವನ್ನು ಜಾಗೃತಗೊಳಿಸಲು ಧರ್ಮ ಬೇಕು. ಗುರುವಿನ ದರ್ಶನ ಪಡೆಯಲು ಭಾಗ್ಯ ಬೇಕು. ಗುರು ದರ್ಶನ ಸಂಸ್ಕಾರದಿAದ ಭವ ಬಂಧನ ದೂರವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಭಕ್ತಿ ಭಂಡಾರಿ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಪ್ರಾಪಂಚಿಕ ಸಂಬ0ಧಗಳು ಕಾಲಾಂತರದಲ್ಲಿ ಶಿಥಿಲಗೊಳ್ಳಬಹುದು. ಆದರೆ ಗುರು ಶಿಷ್ಯರ ಸಂಬAಧ ಚಿರಂತನ ನಿತ್ಯ ನೂತನ. ನೊಂದವರ ಬಾಳಿನ ಬೆಳಕು ಶ್ರೀ ಗುರು. ಅರಿವಿನ ಚೈತನ್ಯದ ಪ್ರತೀಕ. ವೀರಶೈವ ಧರ್ಮ ವೃಕ್ಷದ ತಾಯ್ಬೇರು ಶ್ರೀ ಜಗದ್ಗುರು ರೇಣುಕಾಚಾರ್ಯರು. ಆ ಧರ್ಮ ವೃಕ್ಷದ ಹೂ ಹಣ್ಣು ಬಸವಾದಿ ಶರಣರು ಇದ್ದಂತೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಶಿವಪಥವನರಿಯಲು ಗುರು ಪಥವೇ ಮೊದಲು ಎಂದು ಸಾರಿದವರು ಬಸವಣ್ಣನವರು. ಕಾಯಕದ ಮೂಲಕ ಕಳೆಯನ್ನು ತಂದ ಶ್ರೇಯಸ್ಸು ಅವರದೆಂದರು.

ಸಮಾರಂಭ ಉದ್ಘಾಟಿಸಿದ ಶಾಸಕ ಹೆಚ್.ಟಿ.ತಮ್ಮಯ್ಯ ಮಾತನಾಡಿ ತಂದೆ ಮೆಚ್ಚಿದರೆ ಮಗನ ಶ್ರೇಯಸ್ಸು. ಗುರು ಮೆಚ್ಚಿದರೆ ಶಿಷ್ಯನ ಉದ್ಧಾರ ಸಾಧ್ಯ. ಗುರುದೇವನ ಕರುಣೆ ಕಿರಿದಲ್ಲ. ಆ ಹೃದಯ ಹರಕೆಗೆ ಸಮಾನವಾದುದು ಇನ್ನೊಂದಿಲ್ಲ ಎಂದರು. ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು ಭಕ್ತಿ ಭಂಡಾರಿ ಶ್ರೀ ಬಸವೇಶ್ವರರು ಕೆಡಕುಗಳನ್ನು ಮೆಟ್ಟಿ ನಿಂತು ಒಳಿತಿನತ್ತ ಹೆಜ್ಜೆ ಹಾಕಲು ಪ್ರೇರೇಪಿಸಿದ ಮಹಾನುಭಾವರು. ಬಾಳಿಗೊಂದು ಗುರಿ ಮತ್ತು ಗುರು ಇರಬೇಕೆಂಬುದನ್ನು ಮನವರಿಕೆ ಮಾಡಿ ಕೊಟ್ಟರೆಂದರು. ಶಂಕರದೇವರಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ವಿಚಾರ ಧಾರೆ ಎಂದೆ0ದಿಗೂ ಎಲ್ಲರಿಗೂ ಬೇಕಾದವುಗಳು. ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳು ಬಾಳಿನ ವಿಕಾಸಕ್ಕೆ ಅಡಿಪಾಯ. ಭೌತಿಕ ಬದುಕಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಚಿಂತನಗಳು ಭಾಗ್ಯೋದಯದ ಬೆಳಕಿಗೆ ಮೂಲವೆಂದರು. ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಟ್ರಸ್ಟಿನ ಉಪಾಧ್ಯಕ್ಷರಾದ ಎ.ಬಿ. ಸುದರ್ಶನ ಮಾತನಾಡಿ ರವಿ ಕಿರಣದಿಂದ ಪುಷ್ಪ ಅರಳಿದರೆ ಗುರು ಕರುಣದಿಂದ ಆತ್ಮ ಅರಳುತ್ತದೆ. ಜಗ ಬೆಳಗಲು ಸೂರ್ಯ ಬದುಕು ಬೆಳಗಲು ಗುರು ಬೇಕು. ಗುರುವಿನ ಆಧ್ಯಾತ್ಮ ಶಕ್ತಿ ಅದ್ಭುತ. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಮತ್ತು ಬಸವಣ್ಣನವರ ಸಾಮಾಜಿಕ ಚಿಂತನಗಳು ಬದುಕಿನ ವಿಕಾಸಕ್ಕೆ ಅವಶ್ಯಕವೆಂದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟಿನ ಪದಾಧಿಕಾರಿಗಳಾದ ಯು.ಎಮ್.ಬಸವರಾಜ್, ಎಮ್.ಡಿ.ಪುಟ್ಟಸ್ವಾಮಿ, ಎಸ್.ಎಮ್.ದೇವಣ್ಣಗೌಡ ಸೇರಿದಂತೆ ಸರ್ವ ಸದಸ್ಯರು ಪಾಲ್ಗೊಂಡಿದ್ದರು. ಬಾಳೆಹೊನ್ನೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ ಜರುಗಿತು. ಹೆಚ್.ಎನ್.ನಂಜೇಗೌಡ ಸರ್ವರನ್ನು ಸ್ವಾಗತಿಸಿದರು. ಪಾರ್ವತಿ ಮಹಿಳಾ ಬಳಗ ಮತ್ತು ಅಕ್ಕಮಹಾದೇವಿ ಸಂಘದ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಬಿ.ಎ.ಶಿವಶಂಕರ್ ನಿರೂಪಿಸಿದರು. ಕಾರ್ಯದರ್ಶಿ ಸಿ.ವಿ.ಮಲ್ಲಿಕಾರ್ಜುನ್, ವಂದನಾರ್ಪಣೆ ಸಲ್ಲಿಸಿದರು.

ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಸರ್ವರಿಗೂ ಶುಭ ಹಾರೈಸಿದರು.
ಶಂಕರದೇವರಮಠದ ಚಂದ್ರಶೇಖರ ಶಿವಾಚಾರ್ಯರು ೧೬ ಜನ ವಟುಗಳಿಗೆ ಶಿವದೀಕ್ಷಾ ಅಯ್ಯಾಚಾರ ಸಂಸ್ಕಾರ ನೀಡಿ ಮಂತ್ರೋಪದೇಶ ಮಾಡಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.