ಚೈತನ್ಯ ನ್ಯೂಸ್ 24 ಗಜೇಂದ್ರಗಡ ಜೂ.9:
ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಕೈಗೊಂಡಿದ್ದರಿಂದ ಮಳೆಯಿಂದಾಗಿ ಕಂದಕಗಳು ತುಂಗಿದ್ದು, ರೈತರ ಮೂಗದಲ್ಲಿ ಮಂದಹಾಸ ಬೀರುವಂತಾಗಿದೆ.
ತಾಲೂಕಿನಾದ್ಯಂತ ಮೇ ಮತ್ತು ಜೂನ್ ತಿಂಗಳಲ್ಲಿ ವಲಸೆ ಯಾಕೇ ನಿಮ್ಮೂರಲ್ಲಿಯೇ ಕೆಲಸ ಅಭಿಯಾನದಡಿ 13 ಗ್ರಾಮ ಪಂಚಾಯತಿಗಳಲ್ಲಿ ಸಾಮೂಹಿಕ ಬದು ನಿರ್ಮಾಣ ಕೈಗೊಳ್ಳಲಾಗಿದೆ. ರೈತ ಕಾರ್ಮಿಕರಿಗೆ ಕೆಲಸ ಕೊಡುವುದರ ಜೊತೆಗೆ ತಮ್ಮ ಜಮೀನುಗಳಲ್ಲಿ ಬದುವು ನಿರ್ಮಾಣ ಕಾರ್ಯ ನಡೆಸಿದ್ದ ಪರಿಣಾಮ ಸದ್ಯ ಮಳೆ ನೀರು ಕಂದಕಗಳಲ್ಲಿ ತುಂಬಿ ಹರಿಯುತ್ತಿವೆ.

ತಾಲೂಕಿನ ಶಾಂತಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಬದುವು ನಿರ್ಮಾಣ ಕಾರ್ಯ ಈಗ ಯಶಸ್ಸಿನ ಹಾದಿಯಲ್ಲಿ ಸಾಗಿದೆ.
ಬದು ನಿರ್ಮಾಣ ಕಾಮಗಾರಿಯ 9 ಲಕ್ಷ ರೂಪಾಯಿ ಮೊತ್ತದಲ್ಲಿ 2675 ಮಾನವ ದಿನಗಳ ಸೃಜಿಸಿ, ಬರೊಬ್ಬರಿ 1337 ಕ್ಕೂ ಅಧಿಕ ಕಂದಕಗಳನ್ನು ನಿರ್ಮಾಣ ಮಾಡಲಾಗಿದೆ. ಶಾಂತಗೇರಿ ಗ್ರಾಮದ ಕಿರು ಜಲಾನಯನ ಮೈಕ್ರೋ ಕೋಡನಲ್ಲಿ ಬದು ನಿರ್ಮಾಣ ಕೈಗೊಂಡು ಈಗಾಗಲೇ 5350 ಕಂದಕಗಳನ್ನು ನಿರ್ಮಾಣ ಮಾಡಿದ್ದು, ಭಾನುವಾರ, ಸೋಮವಾರ ಸುರಿದ ಮಳೆಯಿಂದಾಗಿ ಕಂದಕಗಳು ಭರ್ತಿಯಾಗಿರುವುದು ರೈತರಲ್ಲಿ ಚೈತನ್ಯ ಹೆಚ್ಚಿಸಿದೆ.
ಶಾಂತಗೇರಿ 95 ಹೆಕ್ಟರ್ ಪ್ರದೇಶದಲ್ಲಿ ಸುಮಾರು 456 ಜನ ಅಕುಶಲ ಕೂಲಿಕಾರರು ಸೇರಿ ಕಳೆದ ಮೇ ಮತ್ತು ಜೂನ್ ತಿಂಗಳಲ್ಲಿ ಕೆಲಸ ಮಾಡಿದ್ದಾರೆ. 5350 ಕಂದಕಗಳನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದ ಜಮೀನಿನ ಸುತ್ತ ಬದು ನಿರ್ಮಾಣವಾಗಿದೆ. ಭಾನುವಾರ ಮತ್ತು ಸೋಮವಾರ ಸುರಿದ ಭಾರಿ ಮಳೆಯಿಂದಾಗಿ ಜಮೀನಿನಲ್ಲಿ ಬಿದ್ದ ನೀರು ಭೂಮಿಯಲ್ಲಿ ಇಂಗಿದ ನಂತರ ಹರಿದು ಬಂದು ಕಂದಕಗಳಲ್ಲಿ ಸಂಗ್ರಹಗೊಂಡಿವೆ. ಇಂದರಿಂದಾಗಿ ತಮ್ಮ ಜಮೀನಿನಲ್ಲಿನ ಮಣ್ಣಿನ ಸವಕಳಿ ತಪ್ಪಿದೆ. ಬದುವಿನ ಹತ್ತಿರ ಕಂದಕಗಳನ್ನು ನಿರ್ಮಾಣ ಮಾಡಿದ್ದರಿಂದ ಬದು ಬೇಸಾಯ ಮಾಡಲು ಅನುಕೂಲವಾಗಲಿದೆ.

ಎಲ್ಲೆಲ್ಲಿ ಕಂದಕಗಳಲ್ಲಿ ನೀರು:
ರಾಜೂರು, ಸೂಡಿ, ಕುಂಟೋಜಿ, ರಾಂಪೂರು ನಿಡಗುಂದಿ, ಇಟಗಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ನರೇಗಾ ಯೋಜನೆಯಡಿ ವೈಜ್ಞಾನಿಕವಾಗಿ ಜಲಾ ನಯನ ಮಾದರಿಯೊಳಗೆ ಯೋಜನೆ ರೂಪಿಸಿ ಭೌಗೊಳಿಕವಾಗಿ ಮೇಲ್ಮಟ್ಟದಿಂದ ಕೆಳ ಮಟ್ಟದವರೆಗೂ ಹಂತ ಹಂತವಾಗಿ ಜಮೀನಿನಲ್ಲಿ ಸಾಮೂಹಿಕ ಬದು ನಿರ್ಮಾಣ ಕಾರ್ಯ ನಡೆಸಲಾಗಿದೆ.
ಕೋಟ್..
ನರೇಗಾ ಯೋಜನೆಯಡಿ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿರುವ ಕಾಮಗಾರಿಗಳಾದ ಬದು ನಿರ್ಮಾಣ ಹೆಚ್ಚಿನ ಆದ್ಯತೆ ನೀಡಿ ಮೇ ಮತ್ತು ಜೂನ್ ತಿಂಗಳಲ್ಲಿ ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ತಾಲೂಕಿನ 13 ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿಗಳು ಪ್ರಾರಂಭಗೊಂಡಿವೆ. ಕೂಲಿಕಾರರು ರೈತರ ಜಮೀನಿನಲ್ಲಿ ಕಂದಕ ಬದುಗಳನ್ನು ನಿರ್ಮಾಣ ಮಾಡಿದ್ದರಿಂದ ಮುಂಗಾರು ಹಂಗಾಮಿನ ಮಳೆಗೆ ಕಂದಕಗಳಲ್ಲಿ ಮಳೆನೀರು ಸಂಗ್ರವಾಗಿವೆ. ಸರ್ಕಾರ ಯೋಜನೆ ಈಡೇರಿದೆ.
– ಶರಣಪ್ಪ ನರೇಗಲ್, ಸಹಾಯಕ ನಿರ್ದೇಶಕರು, ತಾ.ಪಂ. ಗಜೇಂದ್ರಗಡ
ಕೋಟ್..
ನರೇಗಾ ಯೋಜನೆಯಡಿ ವೈಜ್ಞಾನಿಕವಾಗಿ ಕಿರು ಜಲಾನಯನ ಮಾದರಿಯೊಳಗೆ ಯೋಜನೆ ರೂಪಿಸಿ ಭೌಗೊಳಿಕವಾಗಿ ಮೇಲ್ಮಟ್ಟದಿಂದ ಸಮುದಾಯ ಬದು ನಿರ್ಮಾಣ ಮಾಡುತ್ತಾ ಬರಲಾಗುವುದು. ಬೇಸಿಗೆಯಲ್ಲಿ ಕೂಲಿಕಾರರಿಗೆ ಕೆಲಸ ನೀಡುವುದರ ಜೊತೆಗೆ ರೈತರ ಜಮೀನಿನಲ್ಲಿ ಬದು ನಿರ್ಮಾಣ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಕಂದಕದಲ್ಲಿ ಮಳೆನೀರು ತುಂಬಿರುವುದು ಯೋಜನೆ ಯಶಸ್ವಿಯಾಗಿದೆ.
– ಚಂದ್ರಶೇಖರ ಬಿ. ಕಂದಕೂರು, ಕಾರ್ಯನಿರ್ವಾಹಕ ಅಧಿಕಾರಿಗಳು, ತಾ.ಪಂ. ಗಜೇಂದ್ರಗಡ.