ಚೈತನ್ಯ ನ್ಯೂಸ್ 24 ನರೇಗಲ್ಲ ಜೂ.6:
ಪ್ರಕೃತಿಯನ್ನು ರಕ್ಷಿಸುವುದು ಕೇವಲ ಸರ್ಕಾರದ ಅಥವಾ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ. ಅದು ಈ ದೇಶದ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಮತ್ತು ಸಾಮಾಜಿಕ ಹೊಣೆಯಾಗಿದೆ” ಎಂದು ಪಿಎಸ್ಐ (PSI) ಐಶ್ವರ್ಯ ನಾಗರಾಳ ಅವರು ತಿಳಿಸಿದರು.
ಸ್ಥಳೀಯ ಪೊಲೀಸ್ ಠಾಣೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ “ವಿಶ್ವ ಪರಿಸರ ದಿನಾಚರಣೆ ಮತ್ತು ಸಸಿ ನೆಡುವ ಕಾರ್ಯಕ್ರಮ”ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಕೃತಿ ವಿಕೋಪಕ್ಕೆ ಮಾನವನ ಸ್ವಾರ್ಥವೇ ಕಾರಣ, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಜಾಗತಿಕ ತಾಪಮಾನ, ಅಕಾಲಿಕ ಮಳೆ ಮತ್ತು ವಾಯು ಮಾಲಿನ್ಯಕ್ಕೆ ಮಾನವನ ಅತಿಯಾದ ಆಸೆ ಹಾಗೂ ಪ್ರಕೃತಿಯ ಮೇಲಿನ ಶೋಷಣೆಯೇ ನೇರ ಕಾರಣ ಎಂದು ಕಳವಳ ವ್ಯಕ್ತಪಡಿಸಿದರು. ಪ್ರಕೃತಿಯ ಸಮತೋಲನ ತಪ್ಪಿದರೆ ಮಾನವನ ಉಳಿವೇ ಕಷ್ಟವಾಗುತ್ತದೆ ಎಂಬುದನ್ನು ನಾವೆಲ್ಲರೂ ಅರಿಯಬೇಕಿದೆ ಎಂದರು.
ಗಿಡ ನೆಡುವುದಷ್ಟೇ ಅಲ್ಲ, ಬೆಳೆಸುವುದು ಮುಖ್ಯ: “ಕೇವಲ ಜೂನ್ 5 ಬಂತೆಂದರೆ ಗಿಡ ನೆಟ್ಟು ಫೋಟೋ ತೆಗೆಸಿಕೊಳ್ಳುವುದರಿಂದ ಪರಿಸರ ಬೆಳೆಯುವುದಿಲ್ಲ. ನೆಟ್ಟ ಸಸಿಗಳನ್ನು ಹೆತ್ತ ಮಕ್ಕಳಂತೆ ಪೋಷಿಸಿ, ಅವು ಹೆಮ್ಮರವಾಗುವವರೆಗೆ ಜವಾಬ್ದಾರಿ ತೆಗೆದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ.” ದೈನಂದಿನ ಜೀವನದಲ್ಲಿ ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಸಾರ್ವಜನಿಕರು ಬಟ್ಟೆ ಚೀಲಗಳನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ನಿವೃತ್ತ ಶಿಕ್ಷಕ ಎಂ ಎಸ್ ಧಡೇಸೂರಮಠ ಮಾತನಾಡಿ ಇಂದಿನ ವಿದ್ಯಾರ್ಥಿಗಳು ಮತ್ತು ಯುವಜನರು ಪರಿಸರ ಸಂರಕ್ಷಣೆಯ ರಾಯಭಾರಿಗಳಾಗಬೇಕು. ಪ್ರತಿಯೊಬ್ಬರೂ ತಮ್ಮ ಹುಟ್ಟುಹಬ್ಬದ ಸವಿನೆನಪಿಗಾಗಿ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಬೆಳೆಸುವ ಸಂಕಲ್ಪ ಮಾಡಬೇಕು. ನಾವು ಪ್ರಕೃತಿಯನ್ನು ರಕ್ಷಿಸಿದರೆ, ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಮುಂದಿನ ಪೀಳಿಗೆಗೆ ನಾವು ನೀಡಬಹುದಾದ ಅತ್ಯಂತ ಅಮೂಲ್ಯವಾದ ಆಸ್ತಿ ಎಂದರೆ ಅದು ಕೋಟ್ಯಂತರ ರೂಪಾಯಿ ಹಣವಲ್ಲ, ಬದಲಿಗೆ ಶುದ್ಧವಾದ ಗಾಳಿ, ನೀರು ಮತ್ತು ಹಸಿರು ಪರಿಸರ.”ಎಂದು ಅವರು ತಿಳಿಸಿದರು.
ಬಾಕ್ಸ……
ಪೊಲೀಸ್ ಇಲಾಖೆಯ ಕಠಿಣ ಕರ್ತವ್ಯಗಳ ನಡುವೆಯೂ ಸಮಾಜಮುಖಿ ಚಿಂತನೆ ನಡೆಸಿ, ಪರಿಸರ ಜಾಗೃತಿ ಮೂಡಿಸುತ್ತಿರುವ ಪಿಎಸ್ಐ ಐಶ್ವರ್ಯ ನಾಗರಾಳ ಅವರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಕಾರ್ಯಕ್ರಮದ ಅಂಗವಾಗಿ ಠಾಣೆಯ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ASI M R ಬಾರಕೇರ, R S ಕಪ್ಪತ್ತನವರ, P K ದಾಸರ, V S ಗೋದಿಗನೂರ, B S ಮಾಯಮ್ಮನವರ, UM ಬಂಗಾರಿ. ಮಂಜುನಾಥ್ ಮಾದರ, ರೋಷನ್ ಜಮೀರ್, ಶಾಂತಕುಮಾರ ವಡ್ಡರ, ಸ್ಥಳೀಯ ಮುಖಂಡರು, ಪರಿಸರ ಪ್ರೇಮಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದು, ಪರಿಸರ ಸಂರಕ್ಷಣೆಯ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.