53
ಚೈತನ್ಯ ನ್ಯೂಸ್ 24 ಕಮಲಾಪುರ ಜೂ.19:
ಭೌತಿಕ ಸಂಪತ್ತು ಎಷ್ಟಿದ್ದರೂ ಅದರಿಂದ ಶಾಂತಿ ನೆಮ್ಮದಿ ದೊರಕದು. ಪವಿತ್ರ ಧರ್ಮಾಚರಣೆಯಿಂದ ಜೀವನ ಉಜ್ವಲಗೊಳ್ಳುವುದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಮಂಗಳವಾರ ತಾಲೂಕಿನ ಗೊಣಗಿ ಗ್ರಾಮದ ಶ್ರೀ ಹನುಮಾನ್ ನೂತನ ದೇವಸ್ಥಾನದ ಉದ್ಘಾಟನೆ-ಕಳಸಾರೋಹಣ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಹೊತ್ತ ಭೂಮಿ ಹೆತ್ತ ತಾಯಿ ಎಷ್ಟು ಮುಖ್ಯವೋ ಅಷ್ಟೇ ಧರ್ಮವು ಮುಖ್ಯ. ಧರ್ಮವೆಂದರೆ ಜಾತಿ ಅಲ್ಲ. ಜಾತಿಗಿಂತ ಧರ್ಮ ದೊಡ್ಡದು. ಧರ್ಮದಲ್ಲಿರುವ ವಿಶಾಲ ಮನೋಭಾವನೆ ಜಾತಿಯಲ್ಲಿ ಕಾಣಲು ಸಾಧ್ಯವಿಲ್ಲ. ಧರ್ಮ ದೇವರು ಮತ್ತು ಗುರು ಜೀವನದ ವಿಕಾಸಕ್ಕೆ ಅವಶ್ಯಕ. ಸತ್ಯದ ತಳಹದಿಯ ಮೇಲೆ ಮಾನವ ಜೀವನ ರೂಪಿತಗೊಳ್ಳಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಶ್ರೀ ಜಗದ್ಗುರು ರೇವಣಸಿದ್ಧೇಶ್ವರರು ಮಾಡಿದ ಧಾರ್ಮಿಕ ಮತ್ತು ಸಾಮಾಜಿಕ ಸತ್ಕಾçಂತಿ ಎಲ್ಲ ಕ್ರಾಂತಿಗಳ ಮೂಲ ಗಂಗೋತ್ರಿಯಾಗಿದೆ. ಅವರು ಬೋಧಿಸಿದ ಧರ್ಮದ ದಶವಿಧ ಸೂತ್ರಗಳು ಬದುಕಿನ ವಿಕಾಸಕ್ಕೆ ಕಾರಣವಾಗಿವೆ. ಗೊಣಗಿ ಗ್ರಾಮ ಚಿಕ್ಕದಾದರೂ ಬಹಳ ಶ್ರದ್ಧೆಯಿಂದ ನಿರ್ಮಿಸಿದ ಹನುಮಾನ್ ಮಂದಿರ ಹಾಗೂ ಗೋಪುರ ಕಳಸಾರೋಹಣ ಅಂಗವಾಗಿ ಜರುಗಿದ ಎಲ್ಲಾ ಕಾರ್ಯಕ್ರಮಗಳು ತಮಗೆ ತೃಪ್ತಿ ತಂದಿವೆ ಎಂದು ಹರುಷ ವ್ಯಕ್ತಪಡಿಸಿದರು.

ಹೊನ್ನಕಿರಣಗಿ ಚಂದ್ರಗು0ಡ ಶಿವಾಚಾರ್ಯ ಸ್ವಾಮಿಗಳು ಧರ್ಮ ಸಮಾರಂಭ ಉದ್ಘಾಟಿಸಿ ವೀರಶೈವ ಧರ್ಮ ಸಂಸ್ಕೃತಿಯ ಬಗೆಗೆ ಮಾತನಾಡಿದರು. ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ದೇವಾಲಯ ಸಂಸ್ಕೃತಿ ಮತ್ತು ಅದರ ಪರಿಣಾಮ ಕುರಿತು ಉಪದೇಶಾಮೃತವನ್ನಿತ್ತರು. ಶ್ರೀನಿವಾಸ ಸರಡಗಿ, ಸುಗೂರು, ನರನಾಳ, ಆಂದೋಲಾ, ಮಂಗಲಗಿ ತೆಂಗಳಿ, ಕೊಡ್ಲಿ, ರಟಕಲ್, ನಾಗೂರು, ಹೊಸಳ್ಳಿ, ಐನಾಪುರ ಮೊದಲಾದ ಶ್ರೀಗಳು ಪಾಲ್ಗೊಂಡಿದ್ದರು. ಕೆ.ಪಿ.ಸಿ.ಸಿ.ಉಪಾಧ್ಯಕ್ಷ ಸುಭಾಷ ರಾಠೋಡ ಮೊದಲ್ಗೊಂಡು ಹಲವಾರು ಗಣ್ಯರು ಉಪಸ್ಥಿತರಿದ್ದರು.

ಗೊಣಗಿ ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಡಗರ ಸಂಭ್ರಮದಿ0ದ ಜರುಗಿತು. ಸಮಾರಂಭಕ್ಕೂ ಮುನ್ನ ರೇವಗ್ಗಿ ರಟಕಲ್ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಪೂಜೆ ಸಲ್ಲಿಸಿದರು.