ಚೈತನ್ಯ ನ್ಯೂಸ್ 24 ಕಡೇನಂದಿಹಳ್ಳಿ ಮೇ.27:
ಶಿಕಾರಿಪುರ ತಾಲೂಕಿನ ತಪೋಕ್ಷೇತ್ರ ಕಡೇನಂದಿಹಳ್ಳಿ ಶ್ರೀ ಮಳೆ ಮಲ್ಲೇಶ್ವರಸ್ವಾಮಿ ಜಾಗೃತ ಸ್ಥಳದಲ್ಲಿರುವ ಶ್ರೀಮದ್ ರಂಭಾಪುರಿ ಶಾಖಾ ಮಠ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ನೂತನ ಶ್ರೀ ಗುರು ಪಟ್ಟಾಧಿಕಾರ ಸ್ವೀಕಾರ ಮಾಡಿದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳವರು ಐದು ದಿನಗಳ ಮೌನ ಶಿವಾನುಷ್ಠಾನವನ್ನು ಮಂಗಳವಾರ ಆರಂಭಿಸಿದರು.

ಅಧಿಕ ಜೇಷ್ಠ ಮಾಸದ ಪ್ರಯುಕ್ತ ಲೋಕ ಕಲ್ಯಾಣಕ್ಕಾಗಿ ಮನೋವಾಂಛಿತ ಸಿದ್ಧಿಗಾಗಿ ಆರಂಭಿಸಿರುವ ಮೌನ ಶಿವಾನುಷ್ಠಾನವನ್ನು ಮೇ ೩೦ ಶನಿವಾರದವರೆಗೆ ಮಾಡುವರು. ಮೇ ೩೧ರಂದು ಮೌನ ಶಿವಾನುಷ್ಠಾನ ಮಂಗಲ ಹಾಗೂ ಶ್ರೀ ಗುರು ಪಟ್ಟಾಧಿಕಾರ ಕಾರ್ಯಕ್ರಮದ ಅಭಿನಂದನಾ ಸಮಾರಂಭ ಜರುಗುವುದು. ಅಂದು ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಮಠದ ದೈವಗಳಿಗೆ ವಿಶೇಷ ಪೂಜೆ ತೀರ್ಥ ಪ್ರಸಾದ ವಿನಿಯೋಗ ನಡೆಯುವುದು. ನಂತರ ಶ್ರೀಗಳು ನೆಲಮಾಳಿಗೆಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ ಮೌನಾಷ್ಠಾನವನ್ನು ಮಂಗಲಗೊಳಿಸುವರು. ನಂತರ ೧೧ ಗಂಟೆಗೆ ಗುರುಗಳ ದರ್ಶನ ಆಶೀರ್ವಚನ ನಡೆಯುವುದು. ಇದೇ ಸಂದರ್ಭದಲ್ಲಿ ಶ್ರೀ ಮಠದ ಹಿತೈಷಿಗಳಾದ ಸಂಸದ ಬಿ.ವೈ.ರಾಘವೇಂದ್ರ ಇವರಿಗೆ ವಿಶೇಷ ಗೌರವ ಸಮರ್ಪಣೆ ನಡೆಯುವುದು. ೫ ದಿನಗಳ ಕಾಲ ಜರುಗುವ ಮೌನ ಶಿವಾನುಷ್ಠಾನ ಸಮಯದಲ್ಲಿ ಶ್ರೀಗಳವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಪ್ರತಿ ತಿಂಗಳ ಹುಣ್ಣಿಮೆಯಂತೆ ಶ್ರೀಗಳವರ ದರ್ಶನಾಶೀರ್ವಾದ ಇರುತ್ತದೆ ಎಂದು ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟಿನ ಪ್ರಕಟಣೆಯಲ್ಲಿ ತಿಳಿಸಿದೆ.