ಚೈತನ್ಯ ನ್ಯೂಸ್ 24 ಯಲಬುರ್ಗಾ: ಮೇ.16:
ಇಂದಿನ ಆರ್ಥಿಕ ಮತ್ತು ವ್ಯಾಪಾರ ವ್ಯವಸ್ಥೆಯಲ್ಲಿ ತೆರಿಗೆ ಕಾಯಿದೆಗಳ ಅರಿವು ಪ್ರತಿಯೊಬ್ಬ ವಿದ್ಯಾರ್ಥಿಗೂ ಅಗತ್ಯವಾಗಿದ್ದು, ವಿಶೇಷವಾಗಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಜಿ.ಎಸ್.ಟಿ ಹಾಗೂ ಆದಾಯ ತೆರಿಗೆ ಕಾಯಿದೆಗಳ ಕುರಿತು ಸಮಗ್ರ ಜ್ಞಾನ ಹೊಂದಬೇಕು ಎಂದು ಪ್ರೋ. ಎಸ್.ವಿ. ಧಾಣಿ ಹೇಳಿದರು.
ಪಟ್ಟಣದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ “ಜಿ.ಎಸ್.ಟಿ 2.0 ಮತ್ತು ಆದಾಯ ತೆರಿಗೆ ಕಾಯಿದೆ-2025” ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಾಧಾರಿತ ಶಿಕ್ಷಣಕ್ಕೆ ಸೀಮಿತವಾಗದೆ, ಆರ್ಥಿಕ, ಕಾನೂನು ಹಾಗೂ ಆಡಳಿತಾತ್ಮಕ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ತೆರಿಗೆ ನೀತಿಗಳು ಪ್ರಮುಖ ಪಾತ್ರವಹಿಸುತ್ತಿದ್ದು, ಪ್ರತಿಯೊಬ್ಬ ನಾಗರಿಕರೂ ತೆರಿಗೆ ವ್ಯವಸ್ಥೆಯ ಮೂಲಭೂತ ಅಂಶಗಳನ್ನು ತಿಳಿದಿರಬೇಕು ಎಂದು ಹೇಳಿದರು.
ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವಿದ್ಯಾರ್ಥಿಗಳಿಗೆ ಜಿ.ಎಸ್.ಟಿ ಹಾಗೂ ಆದಾಯ ತೆರಿಗೆ ಕಾಯಿದೆಗಳ ಜ್ಞಾನವು ಭವಿಷ್ಯದ ಉದ್ಯೋಗ ಹಾಗೂ ವೃತ್ತಿ ಜೀವನದಲ್ಲಿ ಸಹಕಾರಿಯಾಗಲಿದೆ. ಬ್ಯಾಂಕಿಂಗ್, ಲೆಕ್ಕಪತ್ರ, ಆಡಿಟ್, ಹಣಕಾಸು ನಿರ್ವಹಣೆ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ತೆರಿಗೆ ಜ್ಞಾನ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.
ತೆರಿಗೆ ಪಾವತಿ ದೇಶದ ಅಭಿವೃದ್ಧಿಗೆ ಪ್ರಮುಖ ಆಧಾರವಾಗಿದೆ. ಸರ್ಕಾರದ ಅಭಿವೃದ್ಧಿ ಯೋಜನೆಗಳು, ಮೂಲಸೌಕರ್ಯ, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ಅಭಿವೃದ್ಧಿಗೆ ತೆರಿಗೆ ಆದಾಯವೇ ಮೂಲವಾಗಿರುವುದರಿಂದ ವಿದ್ಯಾರ್ಥಿಗಳು ತೆರಿಗೆ ವ್ಯವಸ್ಥೆಯ ಮಹತ್ವ ಅರಿತುಕೊಳ್ಳಬೇಕು ಎಂದು ಪ್ರೋ. ಧಾಣಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಆರ್ಥಿಕ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿದ್ದು, ಜಿ.ಎಸ್.ಟಿ ವ್ಯವಸ್ಥೆಯೂ ತಂತ್ರಜ್ಞಾನ ಆಧಾರಿತವಾಗಿ ಬದಲಾಗುತ್ತಿದೆ. ವಿದ್ಯಾರ್ಥಿಗಳು ಹೊಸ ಆರ್ಥಿಕ ನೀತಿಗಳು ಹಾಗೂ ತೆರಿಗೆ ವ್ಯವಸ್ಥೆಗಳ ಕುರಿತು ನಿರಂತರವಾಗಿ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಡಾ. ಪಾಂಡುರಂಗ ವಿ ಹಾಗೂ ಡಾ. ಹೊಸಮನಿ ಮಂಜುನಾಥ ಅವರು ಜಿ.ಎಸ್.ಟಿ 2.0 ವ್ಯವಸ್ಥೆಯ ಹೊಸ ನಿಯಮಗಳು, ಆದಾಯ ತೆರಿಗೆ ಕಾಯಿದೆ-2025ರ ಪ್ರಮುಖ ಅಂಶಗಳು ಹಾಗೂ ಇತ್ತೀಚಿನ ತಿದ್ದುಪಡಿಗಳ ಕುರಿತು ವಿವರವಾದ ಉಪನ್ಯಾಸ ನೀಡಿದರು.
ಜಿ.ಎಸ್.ಟಿ ಅನುಷ್ಠಾನದಿಂದ ವ್ಯಾಪಾರ ವಲಯದಲ್ಲಿ ಉಂಟಾದ ಬದಲಾವಣೆಗಳು, ಡಿಜಿಟಲ್ ತೆರಿಗೆ ಪಾವತಿ ವಿಧಾನಗಳು, ಇ-ಇನ್ವಾಯ್ಸ್ ವ್ಯವಸ್ಥೆ, ಆದಾಯ ತೆರಿಗೆ ಸಲ್ಲಿಕೆ ಕ್ರಮಗಳು ಹಾಗೂ ಉದ್ಯಮಿಗಳಿಗೆ ಇರುವ ನಿಯಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.
ತೆರಿಗೆ ವ್ಯವಸ್ಥೆಯ ಅರಿವು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಉದ್ಯೋಗಾವಕಾಶಗಳಲ್ಲಿಯೂ ಸಹಕಾರಿಯಾಗಲಿದೆ ಎಂದು ಸಂಪನ್ಮೂಲ ವ್ಯಕ್ತಿಗಳು ಹೇಳಿದರು.
ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ಜಿ.ಎಸ್.ಟಿ, ಆದಾಯ ತೆರಿಗೆ, ಡಿಜಿಟಲ್ ಪಾವತಿ ಹಾಗೂ ತೆರಿಗೆ ನಿಯಮಗಳ ಕುರಿತು ಹಲವು ಪ್ರಶ್ನೆಗಳನ್ನು ಕೇಳಿದರು. ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ ಮಾರ್ಗದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ತೆರಿಗೆ ವ್ಯವಸ್ಥೆಯ ಪ್ರಸ್ತುತ ಸವಾಲುಗಳು, ಆರ್ಥಿಕ ಶಿಸ್ತು, ವ್ಯಾಪಾರದಲ್ಲಿ ಪಾರದರ್ಶಕತೆ ಹಾಗೂ ಡಿಜಿಟಲ್ ಆರ್ಥಿಕ ವ್ಯವಸ್ಥೆಯ ಅಗತ್ಯತೆ ಕುರಿತು ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಎಚ್. ರಾಮದುರ್ಗಾ, ಪ್ರತಿಭಾ ಹಿರೇಮಠ, ಅಲ್ತಾಪ್ ಹುಸೇನ್, ಪಡಿಯಪ್ಪ, ರವಿ ಚಳ್ಳಾರಿ, ಉಮೇಶ್, ಶೃತಿ, ಕಾವ್ಯ, ಕರಿಷ್ಮಾ, ಪಮೀದಾ, ರಾಜ್ಯಶಾಸ್ತ್ರ ವಿಭಾಗದ ದೇವಪ್ಪ ಬಂಡ್ಲೇರ, ವಿದ್ಯಾರ್ಥಿ ಭೀಮಪ್ಪ ರ್ಯಾವಣಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.