ಚೈತನ್ಯ ನ್ಯೂಸ್ ೨೪ ಬಾಳೆಹೊನ್ನೂರು ಮೇ.೩೧:
ಶಿವಜ್ಞಾನದ ಬೀಜ ಬಿತ್ತಿ ಸಂಸ್ಕಾರ ನೀಡುವಾತನೇ ಶ್ರೀ ಗುರು. ಬಾಳಿನ ಬನ ಚಿಗುರಲು ಗುರು ಕಾರುಣ್ಯ ಕಿರಣ ಮುಖ್ಯ. ಭಕ್ತನ ಹೃದಯ ಭಗವಂತ ನೆಲೆಸಿರುವ ಗುಡಿಯಾಗಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಭಾನುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಕನಸು ಸಾಕಾರಗೊಳ್ಳಲು ಮಾರ್ಗ ಬದಲಿಸಬೇಕಲ್ಲದೇ ನಂಬಿದ ತತ್ವಗಳನ್ನಲ್ಲ. ಗಿಡಗಳು ಚಿಗುರು ಪಡೆಯಲು ಎಲೆ ಉದುರಿಸುತ್ತವೇ ಹೊರತು ಬೇರುಗಳನ್ನಲ್ಲ. ಸುಳ್ಳಿನ ಪರ ಜನ ಇದ್ದರೆ ಸತ್ಯದ ಪರ ದೇವರು ಯಾವಾಗಲೂ ಇರುತ್ತಾನೆ. ಸಾವು ಪಡೆಯಲು ಸಾವಿರ ದಾರಿ. ಆದರೆ ಬದುಕು ಪಡೆಯಲು ಇರುವುದೊಂದೇ ದಾರಿ. ಅದುವೇ ಆತ್ಮ ವಿಶ್ವಾಸ. ಧರ್ಮಕ್ಕಿಂತ ದಯಾಗುಣ ಪರಮ ಶ್ರೇಷ್ಠ. ಅರಿವಿಗಿಂತ ಆಚಾರ ದೊಡ್ಡದು. ಅಧಿಕಾರ ಅಂತಸ್ತಿಗಿAತ ಅಭಿಮಾನ ದೊಡ್ಡದು. ಮಾನ ಸನ್ಮಾನಕ್ಕಿಂತ ಸಂಸ್ಕಾರ ಸಂಸ್ಕೃತಿ ದೊಡ್ಡದು. ನಂಬಿಕೆ ಅನ್ನುವ ಚಿಕ್ಕ ಆಸರೆ ಸಿಕ್ಕರೆ ಸಾಕು. ಜೀವನದಲ್ಲಿ ಏನನ್ನಾದರೂ ಸಾಧಿಸಬಹುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಪ್ರತಿಪಾದಿಸಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಅಧಿಕ ಜೇಷ್ಠ ಮಾಸದ ಅಂಗವಾಗಿ ಬುಕ್ಕಾಂಬುಧಿ ತಪೋ ಬೆಟ್ಟದೆಲ್ಲಿ ವಿಶೇಷವಾಗಿ ಜಪ ತಪೋನುಷ್ಠಾನ ನೆರವೇರಿಸಿದ ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳವರಿಗೆ ರೇಶ್ಮೆ ಮಡಿ ಹೊದಿಸಿ ಶುಭ ಹಾರೈಸಿದರು.

ಈ ಅಪೂರ್ವ ಸಮಾರಂಭದಲ್ಲಿ ಹುಬ್ಬಳ್ಳಿಯ ವೀರೇಶ ಪಾಟೀಲ, ಹರಿಹರದ ಕೊಂಡಜ್ಜಿ ಪಂಚಾಕ್ಷರಿ, ಪ್ರೊ.ವಜ್ರೇಶ ನಾಗರಾಜ, ಸುರೇಶ, ತರ್ಲಘಟ್ಟದ ವೀರೇಶ ಹಿರೇಮಠ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ತರ್ಲಘಟ್ಟ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಅಧಿಕ ಜೇಷ್ಠ ಮಾಸದ ಹುಣ್ಣಿಮೆ ಅಂಗವಾಗಿ ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಚಿತ್ರ-೧.
ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಅಧಿಕ ಜೇಷ್ಠ ಮಾಸದ ಹುಣ್ಣಿಮೆ ಅಂಗವಾಗಿ ಜರುಗಿದ ಧರ್ಮ ಸಮಾರಂಭದಲ್ಲಿ
ಬುಕ್ಕಾಂಬುಧಿ ತಪೋಬೆಟ್ಟದೆಲ್ಲಿ ವಿಶೇಷವಾಗಿ ಜಪ ತಪೋನುಷ್ಠಾನ ನೆರವೇರಿಸಿದ ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳವರಿಗೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ರೇಶ್ಮೆ ಮಡಿ ಹೊದಿಸಿ ಶುಭ ಹಾರೈಸಿದರು.
ಚಿತ್ರ ೨.
ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಅಧಿಕ ಜೇಷ್ಠ ಮಾಸದ ಹುಣ್ಣಿಮೆ ಅಂಗವಾಗಿ ಜರುಗಿದ ಧರ್ಮ ಸಮಾರಂಭದಲ್ಲಿ
ಕುಂದಗೋಳ ತಾಲೂಕ ತರ್ಲಘಟ್ಟ ಗ್ರಾಮದಲ್ಲಿ ಜರುಗಲಿರುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಬಿಡುಗಡೆಗೊಳಿಸಿದರು.