ಚೈತನ್ಯ ನ್ಯೂಸ್ 24 ಗದಗ: ಮೇ.25:
ನಗರದ ಮುಳಗುಂದ ನಾಕಾ ಬಳಿಯ ಶ್ರೀ ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯಲ್ಲಿ ಅಖಿಲ ಭಾರತ ಜಂಗಮ ಸೇವಾ ಸಮಿತಿ ಹಾಗೂ ನರಸಾಪೂರದ ಪಂಚವಟಿ ಧಾರ್ಮಿಕ ಗುರುಕುಲ ಜನಕಲ್ಯಾಣ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಜಂಗಮ ಸಮಾಜದ 60 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಧಿಕ ಮಾಸದ ಅಂಗವಾಗಿ ಜಂಗಮ ಸಮಾಜದ 33 ಮಹಿಳೆಯರಿಗೆ ಉಡಿ ತುಂಬುವ ಸಮಾರಂಭ ರವಿವಾರ ಜರುಗಿತು.
ಗಜೇಂದ್ರಗಡದ ಕಾಲಜ್ಞಾನ ಸ್ವಾಮೀಜಿ ಮಾತನಾಡಿ, ಸಮಾಜದ ಮಕ್ಕಳನ್ನು ಗುರುತಿಸಿ ಅವರನ್ನು ಗೌರವಿಸುವುದು ಉತ್ತಮವಾದ ಕೆಲಸ. ಅವರನ್ನು ಸಮಾಜಕ್ಕೆ ಉತ್ತಮ ವ್ಯಕ್ತಿಯಾಗಿ ನಿರ್ಮಾಣ ಮಾಡುವುದು ಅಖಿಲ ಭಾರತ ಜಂಗಮ ಸೇವಾ ಸಮಿತಿ ಉದ್ದೇಶವಾಗಿದ್ದು, ಎಲ್ಲರೂ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು.
ಕದಾಂಪೂರ ಹಿರೇಮಠದ ಡಾ. ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ, ಅಖಿಲ ಭಾರತ ಜಂಗಮ ಸೇವಾ ಸಮಿತಿ ಹಾಗೂ ನರಸಾಪೂರದ ಪಂಚವಟಿ ಧಾರ್ಮಿಕ ಗುರುಕುಲ ಜನಕಲ್ಯಾಣ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಒಟ್ಟು 5 ಕಾರ್ಯಕ್ರಮಗಳನ್ನು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಸಮಾರಂಭಗಳನ್ನು ಜಂಟಿಯಾಗಿ ಮಾಡುವ ಯೋಜನೆಗಳಿದ್ದು, ತಮ್ಮ ಸಹಾಯ-ಸಹಕಾರ ತುಂಬಾ ಉಪಯುಕ್ತವಾಗಿದೆ ಎಂದು ಹೇಳಿದರು.
ಅಖಿಲ ಭಾರತ ಜಂಗಮ ಸೇವಾ ಸಮಿತಿಯ ಅಧ್ಯಕ್ಷ ಪ್ರಭಯ್ಯ ದಂಡಾವತಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೆಂಕಟಾಪೂರ, ಜಿಗೇರಿಯ ಗುರು ಸಿದ್ದೇಶ್ವರ ಶಿವಾಚಾರ್ಯರು, ಅಡ್ನೂರು-ರಾಜೂರು ಬ್ರಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ಮಲ್ಲಸಮುದ್ರ ಓಂಕಾರೇಶ್ವರ ಮಠದ ಫಕೀರೇಶ್ವರ ಸ್ವಾಮೀಜಿ, ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯ ಶಿವಕುಮಾರ ದೇವರು, ನರಸಾಪೂರ ವೀರೇಶ್ವರ ಶರಣರ ಮಠದ ಶಿವಕುಮಾರ ಶರಣರು, ಮಹೇಶ್ವರಯ್ಯ ಸ್ವಾಮಿಗಳು ಹೊಸಳ್ಳಿಮಠ ಸಮ್ಮುಖ ವಹಿಸಿದ್ದರು.