ಚೈತನ್ಯ ನ್ಯೂಸ್ ೨೪ ನರೇಗಲ್ಲ ಜೂ.೬:
ಪಾಲಕರು ನಿಮಗಾಗಿ ತಮ್ಮ ಹೊಟ್ಟೆ-ಬಟ್ಟೆ ಕಟ್ಟಿ ನಿಮ್ಮ ಭವಿಷ್ಯಕ್ಕಾಗಿ ಹಗಲಿರುಳೂ ದುಡಿಯುತ್ತಾರೆ. ನಿಮ್ಮ ಬಗ್ಗೆ ಅವರು ನಿರೀಕ್ಷೆಗಳನ್ನಿಟ್ಟುಕೊಂಡಿರುತ್ತಾರೆ. ಅವರ ನಿರೀಕ್ಷೆಗಳನ್ನೆಂದಿಗೂ ಹುಸಿ ಮಾಡಬೇಡಿ ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಮುಖ್ಯಸ್ಥರು ಮತ್ತು ಡೀನ್ ಶಿಕ್ಷಣ ವಿಭಾಗ ಹಾಗೂ ಶಿಕ್ಷಣ ತರಬೇತಿ ಕೇಂದ್ರದ ಪ್ರೊ. ಜಿ. ಆರ್. ಅಂಗಡಿ ಹೇಳಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದ ಸಾಂಘಿಕ ಚಟುವಟಿಕೆಗಳ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿಮ್ಮ ಕಲಿಕೆ ಮುಗಿದ ನಂತರ ನೀವು ಉದ್ಯೋಗಕ್ಕಾಗಿ ಇತರರ ಮುಂದೆ ಕೈ ಚಾಚಿ ನಲ್ಲದೆ ನಿಮ್ಮದೇ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ, ಹತ್ತಾರು ಜನರಿಗೆ ಉದ್ಯೋಗ ನೀಡುವಂತಹ ವ್ಯಕ್ತಿತ್ವನ್ನು ನೀವುಗಳು ಬೆಳೆಸಿಕೊಳ್ಳಬೇಕು. ಒಕ್ಕಲುತನ ನಮ್ಮೆಲ್ಲರ ಮೂಲ. ಅದನ್ನೆಂದಿಗೂ ಮರೆಯದೆ ನಮ್ಮ ಹೊಲ-ಗದ್ದೆಗಳನ್ನು ರಕ್ಷಿಸಿಟ್ಟುಕೊಳ್ಳುವ ಕಾರ್ಯ ಮಾಡಬೇಕು. ಇನ್ನು ಮುಂದೆ ಜಮೀನಿಗೆ ಚಿನ್ನದಂತಹ ಬೆಲೆ ದೊರಕುವ ಕಾಲ ಹತ್ತಿರವಿದೆ. ವಿದ್ಯೆ, ವಿವೇಕ ಮತ್ತು ವಿಚೇಕ್ಷಣೆಯನ್ನು ನಿಮ್ಮ ಲಕ್ಷಣವನ್ನಾಗಿಮಾಡಿಕೊಂಡು ಜೀವನದಲ್ಲಿ ಸಫಲತೆಯನ್ನು ಕಾಣಿರಿ ಎಂದು ಅಂಗಡಿ ಹೇಳಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ ಅನ್ನದಾನೇಶ್ವರ ಕಾಲೇಜು ಉತ್ತರ ಕರ್ನಾಟಕದ ಶೈಕ್ಷಣಿಕ ಹೆಬ್ಬಾಲಾಗಿದೆ. ಕಲಿತ ಮಹಾವಿದ್ಯಾಲಯವನ್ನು, ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬೇಡಿ ಎಂದರು. ಆಡಳಿತ ಮಂಡಳಿಯ ಚೇರಮನ್ ಡಾ. ಎಸ್. ಎ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಬಿ. ಎಫ್. ಚೇಗರೆಡ್ಡಿ, ಬಸವರಾಜ ಪಲ್ಲೇದ, ಸಾಂಸ್ಕೃತಿಕ ವಿಭಾಗದ ಚೇರಮನ್ ಪಿ. ಎಚ್. ಮಾದರ ಉಪಸ್ಥಿತರಿದ್ದರು.
ರಾಮಚಂದ್ರ ಜೆ, ಡಾ. ಕಲ್ಲಯ್ಯ ಹಿರೇಮಠ ನಿರ್ವಹಿಸಿದರು. ಪ್ರಾಚಾರ್ಯ ಎಸ್. ಜಿ. ಕೇಶಣ್ಣವರ ಸ್ವಾಗತಿಸಿದರು. ಸಮಾರಂಭದಲ್ಲಿ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಸಂಯೋಜಕ ಡಾ. ಡಿ. ಎಲ್. ಪವಾರ ವಂದಿಸಿದರು.
ಫೋಟೋ ಶೀರ್ಷಿಕೆ : ಸಾಂಘಿಕ ಚಟುವಟಿಕೆಗಳ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಜಿ. ಆರ್. ಅಂಗಡಿಯವರನ್ನು ಸನ್ಮಾನಿಸಲಾಯಿತು.