ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.22:
ಉತ್ತರ ಪ್ರದೇಶದ ರಾಯಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು, ದೇಶದ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ‘ದೇಶದ್ರೋಹಿಗಳು’ ಎಂದು ಸಂಬೋಧಿಸಿರುವುದು ಅತ್ಯಂತ ದುರ್ಭಾಗ್ಯಕರ ಹಾಗೂ ಖಂಡನೀಯ ಎಂದು ಬಿಜೆಪಿ ಯುವ ಮುಖಂಡ ಹಾಗೂ ರೋಣ ಮಂಡಲದ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಉಮೇಶ್ ಚನ್ನು ಪಾಟೀಲ ಅವರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ದೇಶದ ಜನತೆಯ ಆಶೀರ್ವಾದದೊಂದಿಗೆ ಸಂವಿಧಾನಾತ್ಮಕವಾಗಿ ಹಲವು ವರ್ಷಗಳಿಂದ ದೇಶವನ್ನು ಸಮರ್ಥವಾಗಿ ಮತ್ತು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಪ್ರಧಾನಮಂತ್ರಿಗಳ ಬಗ್ಗೆ ಇಂತಹ ಅವಹೇಳನಕಾರಿ ಮತ್ತು ನಿಂದನೀಯ ಪದಗಳನ್ನು ಬಳಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮಾಡಿದ ಅವಮಾನವಾಗಿದೆ” ಎಂದು ಹರಿಹಾಯ್ದಿದ್ದಾರೆ.
ರಾಜಕೀಯ ಹತಾಶೆಯ ಪರಮಾವಧಿ:
ರಾಹುಲ್ ಗಾಂಧಿಯವರ ಈ ಹೇಳಿಕೆಯನ್ನು ‘ರಾಜಕೀಯ ಹತಾಶೆ’ ಎಂದು ಬಣ್ಣಿಸಿರುವ ಪಾಟೀಲರು, “ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಸತತವಾಗಿ ಸೋಲನ್ನು ಅನುಭವಿಸುತ್ತಿದೆ. ಅಧಿಕಾರ ಕಳೆದುಕೊಂಡಿರುವ ಹತಾಶೆಯಿಂದ ರಾಹುಲ್ ಗಾಂಧಿಯವರು ಅಸಂಯಮಿತ ಹೇಳಿಕೆಗಳನ್ನು ನೀಡುವ ಮೂಲಕ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ” ಎಂದು ದೂರಿದ್ದಾರೆ.
ಬೇಷರತ್ ಕ್ಷಮೆಯಾಚನೆಗೆ ಆಗ್ರಹ:
ರಾಹುಲ್ ಗಾಂಧಿಯವರು ತಕ್ಷಣವೇ ಈ ಹೇಳಿಕೆಯನ್ನು ಹಿಂಪಡೆಯಬೇಕು. ಅಲ್ಲದೆ, ದೇಶದ ಜನತೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಲ್ಲಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಉಮೇಶ್ ಚನ್ನು ಪಾಟೀಲ ಅವರು ಒತ್ತಾಯಿಸಿದ್ದಾರೆ.
“ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಆದರೆ, ಸಾಂವಿಧಾನಿಕ ಉನ್ನತ ಹುದ್ದೆಗಳಲ್ಲಿ ಇರುವ ನಾಯಕರ ವಿರುದ್ಧ ಇಂತಹ ಕೀಳುಮಟ್ಟದ ಪದಪ್ರಯೋಗ ಮಾಡುವುದು ಸರಿಯಲ್ಲ” ಎಂದು ಅವರು ಕಿಡಿಕಾರಿದ್ದಾರೆ.
— ಉಮೇಶ್ ಚನ್ನು ಪಾಟೀಲ,
ನಿಕಟಪೂರ್ವ ಅಧ್ಯಕ್ಷರು, ಯುವ ಮೋರ್ಚಾ, ಭಾಜಪ ರೋಣ ಮಂಡಲ.