ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.11:
ಇಂದಿನ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಅತ್ಯಂತ ಅವಶ್ಯಕವಾಗಿದ್ದು, ಮಕ್ಕಳ ಭವಿಷ್ಯದ ಜೀವನಕ್ಕೆ ಕಂಪ್ಯೂಟರ್ ಶಿಕ್ಷಣವನ್ನು ಪಡೆಯಲೇಬೇಕು ಎಂದು ಚಂದ್ರಾಮ ಗ್ರಾಮಪುರೋಹಿತ ಹೇಳಿದರು. ಪಟ್ಟಣದ ಕೆಜಿಎಂಎಸ್ ದ್ವಿಭಾಷಾ ಶಾಲೆಯಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಕಂಪ್ಯೂಟರ್ ತರಬೇತಿ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರಕಾರಿ ಶಾಲೆಯ ವಿದ್ಯಾರ್ಥಿಗಳು ಅನೇಕ ಸಂದರ್ಭಗಳಲ್ಲಿ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗಿಂತ ಸೌಲಭ್ಯಗಳಲ್ಲಿ ಹಿಂದುಳಿಯುವ ಉದಾಹರಣೆಗಳಿವೆ. ಆದರೂ ಇಲ್ಲಿ ಮಕ್ಕಳು ಬೇಸಿಗೆ ವೇಳೆಯನ್ನು ವ್ಯರ್ಥ ಮಾಡದೆ ಕಂಪ್ಯೂಟರ್ ಶಿಕ್ಷಣವನ್ನು ಪಡೆದು ಭವಿಷ್ಯಕ್ಕೆ ತಯಾರಾಗಿರುವುದು ಸಂತಸದ ಸಂಗತಿ. ಇಂತಹ ಅವಕಾಶವನ್ನು ಒದಗಿಸಿದ ಶಾಲೆಯ ಗುರುಬಳಗ ಅಭಿನಂದನಾರ್ಹರು ಎಂದು ಹೇಳಿದರು.
ಮುಖ್ಯೋಪಾಧ್ಯಾಯ ಎಂ.ಎಲ್. ಹೊಸಳ್ಳಿ ಮಾತನಾಡಿ, “ಬೇಸಿಗೆ ವೇಳೆಯಲ್ಲಿ ಮಕ್ಕಳಿಗೆ ಉಪಯುಕ್ತವಾದ ಚಟುವಟಿಕೆ ನೀಡಬೇಕೆಂದು ಸಿಬ್ಬಂದಿ ಚರ್ಚಿಸಿ, ಯುಥ್ ಫಾರ್ ಸೇವಾ ಸಂಸ್ಥೆಯಿಂದ ದೊರೆತ ಕಂಪ್ಯೂಟರ್ಗಳನ್ನು ಬಳಸಿಕೊಂಡು ತರಬೇತಿ ನೀಡುವ ಕಾರ್ಯಕ್ರಮ ರೂಪಿಸಲಾಯಿತು. ಶಿಕ್ಷಕರ ಸಹಕಾರದಿಂದ ಇದು ಯಶಸ್ವಿಯಾಗಿದೆ” ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಿ.ಬಿ. ಕುರಿ, ಡಿ.ವಿ. ಕಳ್ಳಿ, ಗುರುಮಾತೆಯರಾದ ವಿ.ಎಸ್. ದಿಂಡೂರ, ರೇವತಿ ಹುಬ್ಬಳ್ಳಿ ಉಪಸ್ಥಿತರಿದ್ದರು. ಶಿಕ್ಷಕ ಜೆ.ಎ. ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.