83
ಚೈತನ್ಯ ನ್ಯೂಸ್ 24 ಸಿದ್ದರಬೆಟ್ಟ ಜೂ.21:
ಯೋಗ ಸಾಧನೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಕೇವಲ ಯೋಗ ದಿನಾಚರಣೆಯಂದು ಮಾತ್ರ ಆಚರಣೆ ಮಾಡದೇ ನಿರಂತರ ಸಾಧನೆ ಮಾಡುವ ಅವಶ್ಯಕತೆ ಇದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಭಾನುವಾರ ಕೊರಟಗೆರೆ ತಾಲೂಕಿನ ಸಿದ್ಧರಬೆಟ್ಟ ಕ್ಷೇತ್ರದಲ್ಲಿ ವಿಶ್ವ ಯೋಗ ದಿನಾಚರಣೆಯಂದು ಯೋಗಾಭ್ಯಾಸ ಮಾಡಿದ ನಂತರ ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಯೋಗ ಸಾಧನೆಗೆ ಬಹಳಷ್ಟು ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ. ಪೂರ್ವದ ಋಷಿ ಮುನಿಗಳು ಮತ್ತು ಆಚಾರ್ಯರು ತಮ್ಮ ಯೋಗ ಸಾಧನೆಯಿಂದ ಜೀವ ಜಗತ್ತಿಗೆ ಅಮೂಲ್ಯವಾದ ಸಂದೇಶವನ್ನು ಕೊಟ್ಟಿದ್ದಾರೆ. ದೇಹ ಬುದ್ಧಿ ಮನಸ್ಸು ಮತ್ತು ಭಾವನೆಗಳನ್ನು ಆರೋಗ್ಯವಾಗಿ ಇಡುವಲ್ಲಿ ಯೋಗ ಮಹತ್ವದ ಸ್ಥಾನವನ್ನು ಪಡೆದಿದೆ. ನಕಾರಾತ್ಮಕ ಭಾವನೆಗಳನ್ನು ದೂರ ಮಾಡಿ ಧನಾತ್ಮಕವಾದ ಚಿಂತನೆಗಳನ್ನು ಉಂಟು ಮಾಡುತ್ತದೆ. ಪ್ರಾಣಾಯಾಮ, ಕಪಾಲಭಾತಿ, ಧ್ಯಾನ, ಮುದ್ರಾ, ಆಸನಗಳ ಮೂಲಕ ನಿತ್ಯ ಯೋಗ ಸಾಧನೆಯಿಂದ ಇಡೀ ಶರೀರಕ್ಕೆ ಚೈತನ್ಯ ಶಕ್ತಿಯನ್ನು ಕೊಡುತ್ತದೆ.

ಒತ್ತಡ ರಹಿತವಾದ ರೋಗ ರಹಿತವಾದ, ಆನಂದಮಯ ಮನೋಲ್ಲಾಸದ ಬದುಕು ಯೋಗ ಸಾಧನೆಯಿಂದ ಪ್ರಾಪ್ತವಾಗುತ್ತದೆ. ಎಲ್ಲ ಸಂಪತ್ತುಗಳಿಗಿAತ ಆರೋಗ್ಯ ಸಂಪತ್ತು ದೊಡ್ಡದು. ಸದೃಢವಾದ ಶರೀರ ಮಾನಸಿಕ ಶಾಂತಿ ಆರೋಗ್ಯ ಯೋಗ ಸಾಧನೆಯಿಂದ ಲಭಿಸುತ್ತದೆ. ಆರೋಗ್ಯಪೂರ್ಣ ದೇಹ ಹೊಂದಲು ಯೋಗ ಸಾಧನೆ ಮಾಡುವುದು ಅವಶ್ಯಕವಿದೆ ಎಂದು ಅವರು ತಿಳಿಸಿದರು.